Wednesday, June 29, 2016

ಸೋಲುವುದರಲ್ಲಿ ತಪ್ಪಿಲ್ಲ.

ಪ್ರತಿದಿನ ಆಫೀಸಿನಲ್ಲಿ ಊಟವಾದ ನಂತರ ಒಂದು ಸುತ್ತು ಸುತ್ತಾಡಿ ಮತ್ತೆ ನಮ್ಮ ಕೆಲಸದ ಜಾಗಕ್ಕೆ ಹೋಗಿ ಕೂರುವ ಪರಿಪಾಠವಿದೆ. ನಮ್ಮ ಹೊಟ್ಟೆಗಳಲ್ಲಿ ತುಂಬಿ ತುಳುಕುತ್ತಿರುವ ಬೊಜ್ಜನ್ನು ನಿಯಂತ್ರಣದಲ್ಲಿಡಲಷ್ಟೇ ಈ ಪರಿಪಾಠ. ನಡೆಯುತ್ತಲ್ಲೇ ಪ್ರಪಂಚದ ಸಂಗತಿಗಳಿಂದ ಹಿಡಿದು ಮನೆಯೊಳಗೆ ಸೇರಿಕೊಂಡ ಜಿರಲೆಗಳ ಕುರಿತಂತೆ ನಮ್ಮ ವಿಚಾರಧಾರೆಗಳು ಹರಿಯುತ್ತವೆ. ಹೀಗೆ ಮೊನ್ನೆ ಮಾತನಾಡುತ್ತಾ ನನ್ನ ಸಹೋದ್ಯೋಗಿ ಸ್ವರ್ಣಾರ ಬಳಿ, ನನಗೇನೋ ಈ ಕೆಲಸ ಕಳೆದುಕೊಂಡರೆ ಅನ್ನುವ ಭಯವಿದೆ ಅಂದೆ. ಸ್ವರ್ಣ, ತಮಾಷೆ ಮಾಡಬೇಡ ಸುಮ್ಮನೇ ನಡೆ ಅಂದ್ರು. ಇಲ್ಲ ಸ್ವರ್ಣ ನನಗೆ ಕೆಲವೊಮ್ಮೆ ಹಾಗನಿಸುತ್ತೆ ಅಂದೆ. ಅವರಿಗೆ ಮಾತಿನ ಗಾಂಭಿರ್ಯ ಅರ್ಥವಾಗಿ. ನನಗೂ ಆ ಭಯವಿದೆ ಅಂದರು ಸ್ವರ್ಣ. ನಮ್ಮ ಸುತ್ತಲಿರುವ ಬಹುತೇಕರಿಗೆ ಆ ಭಯವಿದ್ದೇ ಇದೆ. ಇದು ಸಹಜ ಕೂಡ. ನಂತರ ಮತ್ತಷ್ಟು ಸಹೋದ್ಯೋಗಿ ಮಿತ್ರರ ಜೊತೆ ಇದೇ ವಿಷಯದ ಬಗ್ಗೆ ಚರ್ಚಿಸಿದೆ. ಬಹುತೇಕರಲ್ಲಿ ಈ ಭಯವಿದೆ ಎಂಬುದು ಅರಿವಾಯಿತು.

ಮೇಲಿನ ಚರ್ಚೆ ನಡೆದ ಒಂದಷ್ಟು ದಿನಗಳಾದ ಮೇಲೆ ನಮ್ಮ ಮನೆಯ ಒನರ್ ನನ್ನ ಭೇಟಿ ಮಾಡಲು ನಮ್ಮ ಮನೆಗೆ ಬಂದಿದ್ದರು. ನಾವು ಇರುವುದು ಮೊದಲನೆ ಮಹಡಿಯಲ್ಲಿ ಅವರಿರುವುದು ನೆಲಮಹಡಿಯಲ್ಲಿ. ಹೆಂಡತಿ ಮತ್ತು ಮಗು ಊರಿಗೆ ಹೋದ ಕಾರಣ ಸ್ವಲ್ಪ ಸಮಯ ಕಳೆಯಲು ಕಾರಣ ಹುಡುಕಿಕೊಂಡು ಮಾತನಾಡಲು ಬರುತ್ತಿರುತ್ತಾರೆ. ನಾನಿನ್ನು ಆಗ ತಾನೆ ಆಫ್ಹಿಸಿನಿಂದ ಮನೆಗೆ ಬಂದಿದ್ದೆ. ಸ್ವಲ್ಪ ಮುಖ ತೊಳೆದುಕೊಂಡು ಬರ್ತೀನಿ ಎಂದೆ. ಅವರು ನನ್ನ ರೋಮಿನಲ್ಲಿದ್ದ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದರು. ಮಾತಿಗೆ ಕೂತ ತಕ್ಷಣ ಇಷ್ಟೊಂದು ಪುಸ್ತಕಗಳನ್ನ ಓದಿದ್ದೀರಾ? ಅವರ ಮೊದಲ ಪ್ರಶ್ನೆ. ಎರಡನೆಯದು ಇವೆಲ್ಲ ನಿಮ್ಮ ಕೆಲಸಕ್ಕೆ ಸಂಬಂಧ ಪಟ್ಟ ಪುಸ್ತಕಗಳಾ?...ನಾನು ಸಹಜವಾಗಿಯೇ ಇಲ್ಲ ಇಲ್ಲ ಸುಮ್ಮನೇ ಕಾಲ ಕಳೆಯಲು ಓದುವಂತಹ ಪುಸ್ತಕಗಳಿವು, ನೀವೂ ಓದಿ ಯಾವುದಾದರು ಒಂದು ಎಂದೆ.  ಅವರು ಪುಸ್ತಕ ಓದುವುದು ದಡ್ಡತನದಂತೆಯೇ ಎನ್ನುವಂತೆ ಅಯ್ಯೋ ಬೇಡ ಬೇಡ ನನಗೆ ಅಂದ್ರು. ಹೆಚ್ಚು ಮಾತನಾಡಲೆಂದೇ ತಯರಾಗಿ ಬಂದವರಂತಿದ್ದರು. ನಮ್ಮ ಚಿಕ್ಕಮ್ಮ ಕೊಟ್ಟ ಬಿಸಿ ಬಿಸಿ ಕಾಫಿ ಹಿರುತ್ತಾ ಮಾತು ಮುಂದುವರಿಸಿದರು. ಪುಸ್ತಕಗಳನ್ನು ಕಂಡರೆ ನನಗೆ ಭಯ ಮಾರಾಯ. ಓದಲಾಗದೆ ಬೆಂಗಳೂರಿಗೆ ಬಂದೆ. ಆಗ ಹತ್ತನೇ ತರಗತಿ ಓದಿ, ಎರಡು ವರ್ಷದ ಇಂಡಷ್ಟ್ರಿಯಲ್ ಟ್ರೈನಿಂಗ್(ಐಟಿಐ) ಮಾಡಿ, ಮತ್ತೆ ಮುಂದೆ ಓದಲಾಗದೆ, ಮನೆಯಲ್ಲಿ ಹೇಳದೆ ಬೆಂಗಳೂರಿಗೆ ಓಡಿ ಬಂದೆ ಅಂದರು. ಅಲೇಲೆ ಸ್ವಲ್ಪ ಇನ್ಟ್‌ರೆಸ್ಟಿಂಗ್ ಆಗಿ ಇದಿಯಾಲ್ಲ ಮತ್ತಷ್ಟು ಉತ್ಸಾಹದಿಂದ ಕೆಳ ತೊಡಗಿದೆ.

ಹದಿನೆಂಟನೇ ವಯಸ್ಸಿಗೆ ಇವರು ಏನೂ ಗೊತ್ತಿಲ್ಲದ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದವರು. ಬಾ ಬೆಂಗಳೂರಿಗೆ ಸಹಾಯ ಮಾಡುತ್ತೇವೆ ಎಂದು ಹೇಳಿದ ನೆಂಟರೆಲ್ಲಾ ಕುಂಟು ನೆಪ ಹೇಳಿ ತಪ್ಪಿಸಿಕೊಂಡರು. ಬಹಳ ದಿನಗಳ ಬಳಿಕ ಪಾತ್ರೆ ಮಾರುವ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದರು. ಈ ಕಂಪನಿ ಮುಂಬೈನಿಂದ ಪಾತ್ರೆಗಳನ್ನು ಕೊಂಡು ಕರ್ನಾಟಕದಲ್ಲಿ ಮನೆ ಮನೆಗೆ ಹೋಗಿ ಮಾರುತ್ತಿತ್ತು. ಇವರ ಕೆಲಸ ಮನೆ ಮನೆಗೆ ಹೋಗಿ ಪಾತ್ರೆಗಳನ್ನು ಮಾರುವುದು. ತಿನ್ನಲು ಊಟ, ಮಲಗಲು ಜಾಗ ಮತ್ತು ಭಾನುವಾರ ಪಿಚ್ಚರ್ ನೋಡಬಹುದಾದಷ್ಟು ಹಣ ಮಾತ್ರ ಸಿಗುತ್ತಿತ್ತು. ಹೀಗೆ ನಾಲ್ಕು ವರ್ಶ ಮತ್ತು ಆರು ತಿಂಗಳು ಕಳೆದರು. ಒಂದಿನ ಬೇಸತ್ತು, ಕೆಲಸ ಬಿಡುವುದಾಗಿ ಆ ಕಂಪನಿಯ ಮಾಲಿಕರಿಗೆ ಹೇಳಿ ಊರಿಗೆ ಹೋಗಲು ಹಣ ಕೇಳಿದರೆ ಮನುಷ್ಯ ಊರಿಗೆ ಹೋಗಲು ಬೇಕಾಗುವಷ್ಟು ಹಣವನ್ನೂ ನೀಡಲಿಲ್ಲ. ಸ್ನೇಹಿತರ ಬಳಿ ಸ್ವಲ್ಪ ಹಣ ಪಡೆದು ಹಾಸನದ ಬಳಿಯ ಅವರ ಹಳ್ಳಿಗೆ ಹೋದರು.

ಮೊದಲನೇ ಬಾರಿ ಬಂಡೆ ಜಾರುವುದು(rappelling) ಮಾಡಿದಾಗ ಬೆರುಳು ಸಿಕ್ಕಿಕೊಂಡು ಹೆದರಿದ್ದೆ.
ಹಳ್ಳಿಯಲ್ಲಿ ಹಬ್ಬವಿತ್ತು. ಅಮ್ಮ ಮಗ ಮನೆಗೆ ಬಂದಿದ್ದಾನೆಂದು ಸ್ವಲ್ಪ ಜೋರಾಗಿಯೇ ಹಬ್ಬ ಮಾಡಿದ್ದರು. ಇವರು ಧರ್ಮಸ್ಥಳಕ್ಕೆ ಹೋಗಿದ್ದೆ. ದಾರಿಯಲ್ಲೇ ಇದ್ದ ಕಾರಣ ಬಂದೆ ಅಂದರು. ಊಟವೆಲ್ಲ ಮುಗಿಯಿತು, ಅಪ್ಪ ಎಲೆ ಅಡಿಕೆ ಜಿಗಿಯುತ್ತಾ ಕೂತರು. ಮಗ ಮೆಲ್ಲನೆ ನನಗೆ ಒಂದಷ್ಟು ಹಣ ಬೇಕಿತ್ತು ಅಂದರು. ಅಪ್ಪನಿಗೆ ಕೋಪ, ಅಮ್ಮನಿಗೆ ಆತಂಕ. ಅಮ್ಮ ಇಷ್ಟು ವರ್ಷ ದುಡಿದಿದ್ದೀಯಾ, ನೀನೆ ಕಾಸು ಕೊಡ್ತೀಯಾ ಅಂದ್ರೆ ನಮ್ಮನ್ನೇ ಕೇಳ್ತಿದ್ದಿಯಲ್ಲಪ್ಪ ಅಂದ್ರು. ಮತ್ತೆ ಇವರು ನಡೆದ ಕಥೆಯನ್ನೆಲ್ಲ ವಿವರಿಸಿ ಮೂರು ಸಾವಿರ ಪಡೆದು ಬೆಂಗಳೂರಿಗೆ ಬಂದರು.

ಮತ್ತೆ ಮೊನ್ನೆ ಧೈರ್ಯದಿಂದ rappelling ಮಾಡಿದೆ!
ಈ ಬಾರಿ ಒಂದು ಕೆಲಸ ಗೊತ್ತಿತ್ತು. ಮನೆ ಮನೆಗೆ ಹೋಗಿ ಪಾತ್ರೆ ಮಾರಿ ಅನುಭವವಿತ್ತು. ಮೂರು ಸಾವಿರಕ್ಕೆ ಪಾತ್ರೆ ಖರೀದಿಸಿ, ಕೋಲಾರಕ್ಕೆ ಹೋದರು. ಮೂರರಿಂದ ಐದು ಸಾವಿರ ಮಾಡಿದರು. ಐದರಿಂದ ಎಂಟು ಸಾವಿರ ಮಾಡಿದರು. ಒಂದೇ ವರ್ಷದಲ್ಲಿ ಒಂದು ಸಣ್ಣ ಕಂಪನಿ ಕಟ್ಟಿದರು. ಮತ್ತೊಂದು ವರ್ಷದಲ್ಲಿ ಎಂಟು ಮಂದಿ ಕೆಲಸದವರನ್ನು ನೇಮಿಸಿಕೊಂಡರು. ಬೆಂಗಳೂರಿನ ವಿಜಯನಗರದಲ್ಲಿ ಒಂದು ಶೇಡ್ ಬಾಡಿಗೆ ಪಡೆದರು. ವಹಿವಾಟು ಚೆನ್ನಾಗಿ ನಡೆಯಿತು. ಎಂಟು ಜನರಲ್ಲಿ ಒಬ್ಬನೊಟ್ಟಿಗೆ ಜಗಳವಾಯಿತು, ಅವನು ನಿಧಾನವಾಗಿ ಉಳಿದವರ ತಲೆ ಕೆಡಿಸಿದ. ರಾತ್ರೋರಾತ್ರಿ ಎಂಟು ಜನ ಕೆಲಸ ಬಿಟ್ಟರು. ಶೇಡ್‌ಗೆ ಬಾಡಿಗೆ ಕಟ್ಟಬೇಕು, ಈಗಾಗಲೇ ಕೊಂಡ ಪಾತ್ರೆಗಳನ್ನು ಮಾರಬೇಕು. ಹಲವು ರಾತ್ರಿಗಳು ನಿದ್ದೆಯೇ ಬರಲಿಲ್ಲ. ನಿಧಾನವಾಗಿ ಇವರೇ ಎಲ್ಲ ಪಾತ್ರೆಗಳನ್ನು ಮಾರಿ. ಶೇಡ್‌ನ್ನು ಮುಚ್ಚಿದರು. 




ಮತ್ತೆ ಕಂಪನಿ ಶುರು ಮಾಡಲು ಭಯ. ಮತ್ತೇನು ಮಾಡುವುದು ಎಂಬ ಪ್ರಶ್ನೆ ಬಹಳ ದಿನ ಕಾಡಿತು. ಈ ಕಸುಬನ್ನು ಬಿಟ್ಟರೆ ಬೇರೆ ಯಾವುದೂ ಗೊತ್ತಿಲ್ಲ. ಮತ್ತೆ ಅದೇ ಕೆಲಸಕ್ಕೆ ಇಳಿದರು. ಒಂದೆರಡು ಮಾರಾಟಗಾರರನ್ನು ಸೇರಿಸಿಕೊಂಡರು. ಹೋದ ಬಾರಿ ಕಲಿತ ಪಾಠಗಳನ್ನು ಅಳವಡಿಸಿಕೊಂಡರು. ಹಳೆಯ ತಪ್ಪುಗಳನ್ನು ಮತ್ತೆ ಮಾಡಲಿಲ್ಲ. ಕರ್ನಾಟಕದಾದ್ಯಂತ ಅವರ ಕಂಪನಿಯ ಮಾರಾಟಗಾರರು ಪಾತ್ರೆಗಳನ್ನು ಮಾರಿದರು. ಜೀವನಕ್ಕೆ ಸಾಕಾಗುವಷ್ಟು ಎರಡೇ ವರ್ಷಗಳಲ್ಲಿ ದುಡಿದರು.  

ಮತ್ತೆ ಕಷ್ಟದ ದಿನಗಳು ಹತ್ತಿರವಾದವು. ಈ ಬಾರಿ ಎದೆ ಗುಂದಲಿಲ್ಲ. ಆನ್‌ಲೈನ್ ಉದ್ಯಮ ಬೆಳೆದಂತೆ ಅವರ ಉದ್ಯಮಕ್ಕೂ ಕುತ್ತು ಬಂತು. ಮುಂದೆ ಸಾಗಿಸುವುದು ಕಷ್ಟವೆನಿಸಿ ಸರಿಯಾದ ಸಮಯಕ್ಕೆ ಕಂಪನಿ ಮುಚ್ಚಿದರು. ಒಂದು ವರ್ಷ ಮನೆಯಲ್ಲೇ ನೆಮ್ಮದಿಯಿಂದ ಕಾಲ ಕಳೆದು ಮತ್ತೊಂದು ಹೊಸ ಪ್ರಯತ್ನವನ್ನು ಹಾಸನದಲ್ಲಿ ಮಾಡಲು ಸಿದ್ದತೆ ನಡೆಸುತ್ತಿದ್ದಾರೆ.  ಇವರಿಗಿನ್ನೂ ಮುವತ್ತಾಮೂರು ವರ್ಷ, ಇಂದು ಭಯವೆಂಬುದು ಅವರ ಕಣ್ಣಲ್ಲಿ ಸುಳಿಯುವುದೂ ಇಲ್ಲ.

ನಾನು ಮತ್ತು ಸ್ವರ್ಣ ಮಾತನಾಡುತ್ತಿದ್ದುದಕ್ಕೂ ನಮ್ಮ ಮನೆಯ ಒನರ್ ಜೀವನವನ್ನು ಒಂದೇ ಸೂರಿನಡಿಯಲ್ಲಿ ನೋಡಲು ಪ್ರಯತ್ನಿಸಿದೆ. ನಾವೆಲ್ಲರೂ ಒಂದಲ್ಲಾ ಒಂದು ರೀತಿ ಸೋಲಲೇ ಬೇಕು. ಸೋಲದೇ ಪಾಠ ಕಲಿಯುವುದು ಸುಳ್ಳು. ಬೇಗನೆ ಸೋತವರು ಜೀವನದಲ್ಲಿ ಬೇಗನೆ ಪಾಠ ಕಲಿಯುತ್ತಾರೆ. ನಿಧಾನವಾಗಿ ಸೋತವರು ನಿಧಾನವಾಗಿ ಪಾಠ ಕಲಿಯುತ್ತಾರೆ. ಸೋಲುತ್ತಿವೆಂಬ ಭಯ, ಆತಂಕ ಸೋಲುವ ತನಕವೂ ಇರುತ್ತದೆ. ಸೋಲು ನಿಶ್ಚಿತ ಮತ್ತು ಅದನ್ನು ಎದುರಿಸುವುದನ್ನು ಕಲಿತಾಗ ಮಾತ್ರ ಅದು ದೂರವಾಗುವುದು.

ಮೊನ್ನೆ ಪತ್ರಿಕೆಗಳಲ್ಲಿ ಪರೀಕ್ಷೆಗಳಲ್ಲಿ ಫೇಲ್ ಆಗಿ ಆತ್ಮಹತ್ಯೆಗೊಂಡ ವಿದ್ಯಾರ್ಥಿಗಳ ಬಗ್ಗೆ ಓದಿದೆ. ಮನಸಿಗೆ ಬೇಸರವೆನಿಸಿತು. ನಾವೆಂತ ಸಮಾಜವನ್ನು ಸೃಷ್ಟಿಸುತ್ತಿದ್ದೇವೆ. ಸೋಲನ್ನು ಒಪ್ಪಿಕೊಳ್ಳುವ ಮನಸನ್ನು ನಾವು ರೂಡಿಸಿಕೊಳ್ಳಬೇಕಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಜೀವನ ಪಾಠವನ್ನು ಹೇಳುವಲ್ಲಿ ವಿಫಲವಾಗುತ್ತಿದೆ. ಸೋಲುವುದರಲ್ಲಿ ತಪ್ಪಿಲ್ಲ. ಬೇಗನೆ ಸೋತರೆ ಬೇಗನೆ ಪಾಠಗಳನ್ನು ಕಲಿಯಬಹುದು. ನಾವು ಸದೃಡರಾಗಬೇಕಾದರೆ ನಮ್ಮ ಬಾಲ್ಯ ಅಥವಾ ಯವ್ವನದಲ್ಲೇ ಸೋಲುವುದು ಒಳಿತು. 

ನಿಮ್ಮ ಸ್ನೇಹಿತರು ಅಥವಾ ನೆಂಟರು ಯಾವುದರಲ್ಲಾದರೂ ಸೋತಿದ್ದರೆ, ಅವರ ಜೊತೆ ನಿಲ್ಲಿ. ಅವರಿಗೆ ಧೈರ್ಯ ತುಂಬಿ. ಮುಖ್ಯವಾಗಿ ಪರೀಕ್ಷೆಗಳಲ್ಲಿ ನಪಾಸಾದ ಮಕ್ಕಳನ್ನು ಹುರಿದುಂಬಿಸಿ ಹಿಯಾಳಿಸಬೇಡಿ.

ಇದರ ಇಂಗ್ಲೀಷ್ ಅವತರಣಿಕೆ ಇಲ್ಲಿದೆ.



2 comments: